Skip to main content

ಸಾವಿನಾಚೆಯ ಬದುಕು...

ಬರೆದಿದ್ದುNovember 25, 2010
2ಅನಿಸಿಕೆಗಳು

ಗೋಲಿಯಾಡುತಿದ್ದ ಪುಟ್ಟನ ಕೈಯಿಂದ
ಗೋಲಿಯೊಂದುರುಳಿ ಮಾಯವಾಗಲು,
ಅಳುತ್ತಳುತ್ತಾ ಅಮ್ಮನ ಬಳಿ ಓಡಿದ.
‘ಅಳದಿರು ಕಂದಾ, ಕೊಡುವೆ ಹೊಸ ಗೋಲಿಯನ್ನೊಂದ’
ಎಂದು ತಬ್ಬಿ ಮುತ್ತನಿತ್ತ ಅಮ್ಮನ ಕಣ್ಗಳೊಳಗೆ
ಪುಟ್ಟನಿಗೇನೂ ಕಾಣಿಸಲೇ ಇಲ್ಲ!
 
ನಗುನಗುತ್ತಾ ಆಡ ಹೊರಟ ಪುಟ್ಟನ
ತಲೆಯೊಳಗೆಲ್ಲಾ ಹೊಸ ಗೋಲಿಯದೇ ಯೋಚನೆ....
ಆಕೆಯ ಮುಚ್ಚಿದ ಕಣ್‌ರೆಪ್ಪೆಗಳಂಚಿಂದ
ಅವ್ಯಾಹತ ನೀರ ಧಾರೆಯ ಕೋಡಿ....
ಆಕೆಯೂ ಬೇಡುತಿಹಳು ಎರಡೇ ಎರಡು ಗೋಲಿಗಳ
ಎರಡಿಲ್ಲದಿರೆ ಬೇಡ, ಒಂದಾದರೂ ಬೇಕಾಗಿದೆ,
ಗೋಲಿಯಾಡುವ ಪುಟ್ಟನ ಮುದ್ದು ಮೊಗವ ಸೆರೆ ಹಿಡಿಯಲು
 
ಪುಟ್ಟನ ಆಟದ ಗೋಲಿಗಳೋ
ತಟ್ಟೆಂದು ತರಬಲ್ಲಂಥವುಗಳೇ.
ಆದರೆ ಅವಳ ನಿರ್ಜೀವ ಖಾಲಿ ಕಣ್ಗಳಿಗೆ,
ಉಸಿರಿಲ್ಲದ ದೇಹದ ಗೋಲಿಗಳೇ ಜೀವ ತುಂಬ ಬಲ್ಲವು!
ತಡವರಿಸುವ ಕೈಗಳಿಗೆ, ಎಡವುವ ಕಾಲ್ಗಳಿಗೆ
 ದಾರಿದೀವಿಗೆಯಾಗಬಲ್ಲ ಗೋಲಿಗಳ ದಾನವನ್ನಿತ್ತರೆ,
‘ಆತನ’ ಸನ್ನಿಧಿಯಲ್ಲೊಂದು ಸ್ಥಾನ ಖಾಯಂ ಆಗುವುದಂತೆ.
- ತೇಜಸ್ವಿನಿ ಹೆಗಡೆ

ಲೇಖಕರು

ತೇಜಸ್ವಿನಿ ಹೆಗಡೆ

ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.

http://manasa-hegde.blogspot.com (ನನ್ನ ಕನ್ನಡ ಬ್ಲಾಗ್)

ಅನಿಸಿಕೆಗಳು

KiRti ಗುರು, 11/25/2010 - 15:48

ನಿಮ್ಮ ಕವನಗಳು ಯಾವಾಗಲು ಕನ್ನಡದ ಸಿರಿತನವನ್ನು ತುಂಬಿವೆ.. ನಿಮ್ಮನ್ನು ಮೆಚ್ಚಬೇಕು..

ARUN HOSAGOUDRA ಮಂಗಳ, 11/26/2013 - 15:06

tumba amogha vagide nimma kavana

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.