Skip to main content

ಪಡೆಯಬೇಕಿದೆ ಮತ್ತೆ ನ(ನಿ)ನ್ನ ನಿನ್ನೆಗಳ...

ಬರೆದಿದ್ದುNovember 11, 2010
9ಅನಿಸಿಕೆಗಳು

ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ
ಸಾಗರನ ಸಾಕ್ಷಿಯಿಟ್ಟು, ಬೆರಳಿಗೆ ಅಲೆಗಳುಂಗುರವಿತ್ತ,
ತಿಳಿ ಬಾನ ಕೇಳಿ ಪಡೆದ ಒಂಟಿ ತಾರೆಯ ಹಣೆಗಿತ್ತ,
ಬಿದಿಗೆ ಚಂದಿರನ ಕರಗಿಸಿ ಮೂಗಿನ ಬೊಟ್ಟಿಗಿಟ್ಟ,
ನನ್ಹೆಸರ ದಾರದಲಿ ನಿನ್ಹೆಸರ ಮಣಿಪೋಣಿಸಿ ಕೊರಳಿಗಿತ್ತ,
ಕೊಟ್ಟು ಬಿಡು ಮತ್ತೊಮ್ಮೆ ನಿನ್ನೊಲವಿನ ಉಡುಗೊರೆಗಳ..
ಕೈಯೊಳಗೆ ಕೈ ಬೆಸೆದು ಮೂಡಿದ್ದ ಕೆಂಪು ಗೆರೆಗಳಾ ಬಳೆಗಳು,
ತೊಳೆದರೂ ತೊಡೆಯದಿದ್ದ ನಿನ್ನ ಹೆಸರಿನಾ ಮದರಂಗಿ,
ನೀನಿತ್ತ ಮುಗುಳ್ನಗೆಯ ಚಿಲುಮೆ ನೂಪುರವಾಗಿತ್ತು ಕಾಲ್ಗಳಿಗೆ,
ನೀನಿತ್ತ ಮಲ್ಲಿಗೆಯ ಕಂಪು ಬಾಡಿದ್ದರೂ ಒಳಗಿತ್ತು ಉಸಿರಾಗಿ,
ತುಂಬಿ ಬಿಡು ಮತ್ತೊಮ್ಮೆ ನನ್ನೊಳಗದೇ ಬಣ್ಣವ...
ಕಣ್ಣಂಚುಗಳಿಂದುದುರುತಿದ್ದ ಹನಿಗಳನ್ನೆಲ್ಲಾ ಪೋಣಿಸಿ,
ಮುತ್ತಿನ ಹಾರವ ಮಾಡಿ ಕೊಟ್ಟಿದ್ದೆ ನೀನೆನಗಂದು,
ಕರಗಿ ಹನಿಯುತಿವೆ, ಒಂದೊಂದಾಗುದುರುತಿವೆಯೀಗ,
ಹನಿ ಹನಿಯೂ ನದಿಯಾಗಿ ಮುಳುಗಿಸುತಿದೆ ಮನವ
ಕೊಡಲಾರೆಯಾ ಮತ್ತೊಮ್ಮೆ ನನಗಾಗಿ ಮಣಿಮಾಲೆಯ ?!
ಕೊಟ್ಟು ಬಿಡು ನೀನೊಮ್ಮೆ
ಮತ್ತೆ ಆ ಸವಿ ನೆನಪುಗಳ
ಮೊದಲ ಮಳೆಯ ಸ್ಪರ್ಶಕೇಳುವ
ಇಳೆಯ ಕಂಪಿನಂತಹ ಕನಸುಗಳ
-ತೇಜಸ್ವಿನಿ ಹೆಗಡೆ

ಲೇಖಕರು

ತೇಜಸ್ವಿನಿ ಹೆಗಡೆ

ಮೂಲ ಶಿರಸಿ. ಬೆಳೆದದ್ದು, ಓದಿದ್ದು ಎಲ್ಲಾ ಮಂಗಳೂರಿನಲ್ಲಿ. ಈಗಿರುವುದು ಬೆಂಗಳೂರಿನಲ್ಲಿ. ವಾಸ್ತವಿಕ ನೆಲೆಯಲ್ಲಿ ಕಲ್ಪನೆಯನ್ನು ಕಾಣುವವಳು.. ಕಲ್ಪನೆಗೆ ವಾಸ್ತವಿಕತೆಯ ಚೌಕಟ್ಟನ್ನು ಹಾಕಿ ಬರೆಯುವುದೇ ನಿಜ ಬರಹ ಎನ್ನುವುದು ನನ್ನ ಅಭಿಮತ. "ಕಾಣ್ಕೆ" (ಜಯಶ್ರೀ ಪ್ರಕಾಶನ, ೨೦೦೮)ನನ್ನ ಕಥಾಸಂಕಲನವಾಗಿದೆ. "ಚಿಗುರು" (ಸುಮುಖ ಪ್ರಕಾಶನ, ೧೯೯೫) ಹಾಗೂ "ಪ್ರತಿಬಿಂಬ" (ಜಯಶ್ರೀ ಪ್ರಕಾಶನ, ೨೦೦೮) ನನ್ನ ಕವನಸಂಕಲನಗಳು.

http://manasa-hegde.blogspot.com (ನನ್ನ ಕನ್ನಡ ಬ್ಲಾಗ್)

ಅನಿಸಿಕೆಗಳು

NAGU ಶುಕ್ರ, 11/12/2010 - 12:32

ಸಿಸ್ಟರ್ ನಿಮ್ಮ ಸವಿನೆನಪಿನ ಕವನ ಹೊಗಳಲಸಾಧ್ಯ. ನಿಜವಾಗಲೂ ಸು೦ದರ ಪದಗಳ ಜೋಡಣೆ. ಸೂಪರ್ ಸೂಪರ್ ಸಾಹಿತ್ಯ. ಧನ್ಯವಾದಗಳು ನಿಮಗೆ.

SATISH N GOWDA ಭಾನು, 11/14/2010 - 09:50

ವಾವ್ ಸೂಪರ್ ಕಣ್ರಿ ನಿಮ್ಮ ನೆನ್ನೆಗಳ ನೆನಪಿನ ಕವಿತೆ ......... 

Nagendra Kumar K S ಭಾನು, 11/14/2010 - 22:14

ತೇಜಸ್ವಿನಿಯವರೇ ಬಹು ದಿನಗಳ ನಂತರ ನಿಮ್ಮ ಕವನ ಓದಿ ತುಂಬಾ ಸಂತೋಷವಾಯಿತು. ಕವನ ತುಂಬಾ ಚೆನ್ನಾಗಿದೆ.

kmurthys ಸೋಮ, 11/15/2010 - 21:23

ಎಂದಿನಂತೆ ಮತ್ತೊಂದು ಸುಂದರ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು.

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 11/16/2010 - 10:35

 
 
ತುಂಬಾ ಧನ್ಯವಾದಗಳು.
 -Tejaswini Hegde
 
 
 
 
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.