1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ? ಅದೆಷ್ಟು ಬಾಳಿ ಬದುಕಬೇಕಾದ ಜೀವಗಳು ಕಣ್ಮುಚ್ಚಿಕೊಂಡವೋ, ದೇವರಿಗೇ ಗೊತ್ತು. ಅಂಥ ಸಮಯದಲ್ಲಿ ನನ್ನ ಅಪ್ಪನದೂ ಒಂದು ದೊಡ್ಡ ಕಥೆ. ಪ್ರತಿ ದಿನ ಸಿಂಗಲ್ ನಂಬರ್ ಲಾಟರಿ ಆಡಿದ್ದೂ ಆಡಿದ್ದೇ, ಕನುಸು ಕಂಡಿದ್ದೂ ಕಂಡಿದ್ದೇ!! ಸರ್ವಗ್ನ್ಯನ ಒಂದು ವಚನವನ್ನು ಆ ಸಮಯದಲ್ಲಿ ಹೀಗೆ ಬದಲಿಸಲಾಗಿತ್ತು, " ಸಿಂಗಲ್ ನಂಬರ್ ಲಾಟರಿ ಆಡಿ, ಇದ್ದುದೆಲ್ಲವ ನೀಗಿ, ಸಾಲಗಾರನಾಗಿ ಬರುವವನ, ಸದ್ದಡಗಿ ಸಂತಾನವೆದ್ದು ಹೋಗುವುದು, ಸರ್ವಗ್ನ್ಯ"
ಸಿಕ್ಕಿಂ, ಹರ್ಯಾಣ, ಭೂತಾನ್ ಮೊದಲಾದ ಹೊರ ರಾಜ್ಯಗಳ ಲಾಟರಿ ಟಿಕೆಟ್ ಗಳು ಅತಿ ಹೆಚ್ಚು ಬಹುಮಾನದ ಆಸೆ ಹುಟ್ಟಿಸಿ ಬಹುತೇಕ ಜನರ ಇಡೀ ದಿನದ ವರಮಾನವನ್ನೇ ಕಬಳಿಸಿ ಹಾಕುತ್ತಿದ್ದವು. ಆ ಮೋಹದ ಜಾಲಕ್ಕೆ ನನ್ನ ಅಪ್ಪನೂ ಸಿಲುಕಿದರು. ಅವರು ನಡೆಸುತ್ತಿದ್ದ ಸಣ್ಣ ಹೋಟೆಲಿನಲ್ಲಿ ಬರುತ್ತಿದ್ದ ಆದಾಯವನ್ನೆಲ್ಲ ಜೈ ದುರ್ಗಿ, ಮಹಾಲಕ್ಷ್ಮಿ, ಲಾಭಲಕ್ಷ್ಮಿ ಮುಂತಾದ ಲಕ್ಷ್ಮಿಯರು ಸ್ವಾಹಾ ಮಾಡಿ ಸಂಜೆಯಾದರೆ ಸಾಕು, ಅಪ್ಪನ ಪಿತ್ತ ನೆತ್ತಿಗೇರಿ ಲಾಟರಿಯಲ್ಲಿ ಸೋತ ಸೋಲಿನ ಸೇಡನ್ನು ಎಳೆ ವಯಸ್ಸಿನ ನನ್ನ ಮೇಲೋ, ಇಲ್ಲ, ಮೈಸೂರಿನ ಸಾಧು ಪ್ರಾಣಿಯಾದ ಅಮ್ಮನ ಮೇಲೋ ತೀರಿಸಿಕೊಳ್ಳತೊಡಗಿದರು. ಇದು ಹೀಗೇ ಮುಂದುವರೆದು ಅಪ್ಪ ಸಿಕ್ಕ ಸಿಕ್ಕವರಲ್ಲಿ ಸಾಲ ಮಾಡತೊಡಗಿದರು. ಅವರಿಗೆ ಲಾಟರಿಯಲ್ಲಿ "ಜಯಲಕ್ಷ್ಮಿ" ಒಲಿಯಲೇ ಇಲ್ಲ, ಅವರು ಮಾಡಿದ ಸಾಲಕ್ಕೆ ದಾದಿಯ ಕೆಲಸ ಮಾಡುತ್ತಿದ್ದ ಅಮ್ಮ, ತನ್ನ ಸಂಬಳದ ಹಣದಿಂದ ಬಡ್ಡಿ ಕಟ್ಟುವ ಪರಿಸ್ಥಿತಿ ಬಂದೊದಗಿತು. ಮನೆ ಎಂಬ ಮನೆಯೇ ನರಕವಾಗಿ ಹೋಯಿತು.
ಅಪ್ಪನ ಲಕ್ಕಿ ನಂಬರ್ ಗಳಾದ 05, 09 ತಿಪಟೂರಿನ ಯಾವುದೇ ಅಂಗಡಿಯಲ್ಲಿದ್ದರೂ ಬಿಡುತ್ತಿರಲಿಲ್ಲ. ಯಾರಾದರೂ ಒಬ್ಬ ಶಿಷ್ಯನನ್ನು ಕಳುಹಿಸಿ ಇದ್ದಬದ್ದ ಟಿಕೆಟ್ ಗಳನ್ನೆಲ್ಲ ಖರೀದಿಸುತ್ತಿದ್ದರು. ಸಂಜೆ ಫಲಿತಾಂಶ ಬಂದಾಗ, ಅವರ ನಂಬರ್ ಗೆದ್ದಿದ್ದರೆ, ಆಹಾ, ಪ್ರಪಂಚವನ್ನೇ ಗೆದ್ದಂತೆ ಸಂತೋಷ ಪಡುತ್ತಿದ್ದರು. ಆಕಸ್ಮಾತ್ ಸೋತಿದ್ದರೆ, ಗೋವಿಂದಾ,,,,,,,, ಗೋವಿಂದ,, ಅವರ ಕಣ್ಮುಂದೆ ಬರಲು ಎಲ್ಲರೂ ಹೆದರುತ್ತಿದ್ದರು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಸಂಜೆ 5 ಘಂಟೆಗೆ ಆ ದರಿದ್ರ ಲಾಟರಿ ಫಲಿತಾಂಶ ಬರುವ ಸಮಯಕ್ಕೆ ಸರಿಯಾಗಿ, ಅಪ್ಪಿತಪ್ಪಿಯೂ ಯಾವ ಗಿರಾಕಿಯೂ ಅಪ್ಪನ ಹೋಟೆಲ್ ಕಡೆ ತಲೆ ಹಾಕುತ್ತಿರಲಿಲ್ಲ. ಅರ್ಧ ಟೀ ಕುಡಿಯುವ ಗಿರಾಕಿ ಹೋಟೆಲಿಗೆ ಬಂದರೆ, ಮುಗಿಯಿತು ಅವನ ಕಥೆ, ಅಪ್ಪನ ಲಾಟರಿ ಪ್ರವರ, ಅವರ " ಭರ್ಜರಿ ಕ್ಯಾಲ್ಕುಲೇಷನ್ಸ್" ಗಳ ಕಥೆಯನ್ನೆಲ್ಲಾ ಕೇಳುವ ಘೋರ ಶಿಕ್ಷೆಗೆ ಒಳಗಾಗಬೇಕಿತ್ತು.
ಈ ಕಥೆ ಎಲ್ಲಾ ಕಡೆ ಹರಡಿ ಕೊನೆಗೆ ಹೋಟೆಲಿನ ವ್ಯಾಪಾರವೇ ಬಿದ್ದು ಹೋಯಿತು. ಈಗ ಅಪ್ಪ ಎಲ್ಲರ ಕಣ್ಣಿಗೆ ಒಬ್ಬ "ಭಯೋತ್ಪಾದಕ" ನಂತೆ ಕಾಣುತ್ತಿದ್ದರು. ಅವರನ್ನು ಕಂಡರೆ ಸಾಕು, ಅವರ ಆಪ್ತ ಮಿತ್ರರೂ ಸಹ ಕದ್ದು ಬೇರೆ ದಾರಿಯಿಂದ ಹೋಗಲು ಶುರುವಿಟ್ಟರು. ಈಗ ಅಪ್ಪ ಅಕ್ಷರಶ: ಏಕಾಂಗಿಯಾಗಿದ್ದರು. ಅವರಿಗೆ ಸಿಕ್ಕಿದ್ದು ಈಗ ಅವರ ಸಾಲಕ್ಕೆ ಬಡ್ಡಿ ಕಟ್ಟಲು ಅಮ್ಮ, ಅವರ ಸಿಟ್ಟು, ಸೆಡವುಗಳಿಗೆಲ್ಲ "ಒದೆ" ತಿಂದು ಅವರನ್ನು ಸಮಾಧಾನಿಸಲು ಬಡಪಾಯಿ ನಾನು! ಜೀವನ ನಿಜವಾಗಲೂ ನನಗೆ, ನನ್ನ ಅಮ್ಮನಿಗೆ ನುಂಗಲಾರದ ಬಿಸಿ ತುಪ್ಪವಾಗಿ ಹೋಗಿತ್ತು. ಆಗಲೇ ಅಪ್ಪ ನನ್ನನ್ನು ಒಂದು ದಿನ ವಿನಾ ಕಾರಣ ಎಲ್ಲರೆದುರು ತದುಕಿ ಮನೆ ಬಿಟ್ಟು ಓಡಿ ಹೋಗುವಂತೆ ಮಾಡಿದ್ದು, ಹೇಗೋ ಹತ್ತನೆ ತರಗತಿಯ ಫಲಿತಾಂಶ ಬಂದ ನಂತರ ಹಿಂತಿರುಗಿ ಬಂದ ನಾನು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಮಾಡುವೆನೆಂದಾಗ, ಕೇವಲ ಮೂರು ಸಾವಿರ ರೂಪಾಯಿ ಕಟ್ಟಲು ನಿರಾಕರಿಸಿ, ನನ್ನ ಭವಿಷ್ಯಕ್ಕೆ ಕಲ್ಲು ಹಾಕಿದ್ದು. ಅಮ್ಮ ಮೊದಲೇ ಸಾಧು ಪ್ರಾಣಿ, ಅವರಲ್ಲಿ ಗಂಡನಿಗೆ ಎದುರಾಡುವುದಿರಲಿ, ಗಟ್ಟಿಯಾಗಿ ಮಾತಾಡಲೂ ಶಕ್ತಿಯಿರಲಿಲ್ಲ. ಅಮ್ಮನೂ ಸಹಾ ನಿಸ್ಸಹಾಯಕತೆಯಿಂದ ಕೈ ಚೆಲ್ಲಿದರು.
ಆಗ ಮತ್ತೆ ನಾನು ಓಡಿದೆ ನೋಡಿ, ಮನೆ ಬಿಟ್ಟು, ತಿಪಟೂರಿನಿಂದ, ಸೀದಾ ಹೋಗಿದ್ದು, ಹೊಳೆ ನರಸೀಪುರಕ್ಕೆ, ಚಿಕ್ಕಪ್ಪನ ಮನೆಗೆ. ಆಗ ನನಗೆ ಆಶ್ರಯ ನೀಡಿ ಕಾಲೇಜಿಗೆ ಸೇರಿಸಿ, ಓದಿ ಪದವೀಧರನಾಗಲು ಪ್ರೇರೇಪಿಸಿದ್ದು ಅದೇ ನನ್ನ ಚಿಕ್ಕಪ್ಪ. ಆಕಸ್ಮಾತ್, ಅಂದು ಅವರು ನನ್ನ ಕೈ ಹಿಡಿಯದೆ ಇದ್ದಿದ್ದರೆ, ನಾನು ಇಂದು ಯಾವುದೋ ಒಂದು ಹೋಟೆಲಿನಲ್ಲಿ ಮಾಣಿಯಾಗಿಯೇ ನನ್ನ ಜೀವನ ಕಳೆಯಬೇಕಾಗಿರುತ್ತಿತ್ತು.
ಹೇಮಾವತಿ ನದಿಯ ದಡ ನನ್ನ ಅಚ್ಚು ಮೆಚ್ಚಿನ ತಾಣವಾಯಿತು, ಸಂಜೆಯ ಹೆಚ್ಚು ಹೊತ್ತನ್ನು ನಾನು ಅಲ್ಲಿಯೇ ಕಳೆಯುತ್ತಿದ್ದೆ. ನನ್ನ ಮುಂದಿನ ಜೀವನ ಹೇಗಿರಬೇಕು, ಇಂಥ ಪರಿಸ್ಥಿತಿಯಲ್ಲಿ ಹೇಗೆ ನನ್ನ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತುಂಬ ದೀರ್ಘವಾಗಿ ಯೋಚಿಸುತ್ತಿದ್ದ್ದೆ. ಹಲವಾರು ತಾಕಲಾಟಗಳ ನಡುವೆಯೂ ತಾಯಿ ಹೇಮಾವತಿ, ತನ್ನ ಮಡಿಲಲ್ಲಿ ನೊಂದಿದ್ದ ನನ್ನ ಮನಕ್ಕೆ ತಂಪನ್ನೆರೆದು, ಒಂದು ಸುಂದರ ಭವಿಷ್ಯ ರೂಪಿಸುವ ಛಲಕ್ಕೆ ನನ್ನನ್ನು ಸಿದ್ಧಗೊಳಿಸಿದಳು. ತಾಯಿ ಹೇಮಾವತಿಗೆ ನನ್ನ ನಮನ. ಆ ದಿನದ ಧ್ರುಡ ನಿರ್ಧಾರದ ಫಲವೇ ಇಂದು ನಾನು ದುಬೈನಲ್ಲಿ ಕುಳಿತು ಕೆಲಸ ಮಾಡುವುದಕ್ಕೆ ಕಾರಣವೆನ್ನಬಹುದು.

Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ನಿಮ್ಮ ಜೀವನದ ಹೋರಾಟದ ಲೇಖನ ಚೆನ್ನಾಗಿದೆ ನನ್ನ ಬಾಲ್ಯ ಮತ್ತು ಯವನ ಜೀವನ ನೆನಪಾಯಿತ್ತು ಈ ಸಿಂಗಲ್ ನಂಬರಿಗೆ ಹಲವರು ತಮ್ಮ ಜೀವನಾದ ಅಮುಲ್ಯ ನಂಬರಗಳನು ಕಳೆದು ಕೊಂಡರು ಅಂಥವರಲ್ಲಿ ನಾನು ಒಬ್ಬ ೧೨ ನೇ ವಯಸ್ಸಿನಲ್ಲಿ ಸಿಂಗಲ್ ನಂಬರ್ ವಿದ್ಯೆ ಕಲಿತು ೧೪ನೇ ವಯಸ್ಸಿಗೆ ಸಿಂಗಲ್ ನಂಬರ್ ಮಸ್ಟರ್ ಆಗಿ ವಿದ್ಯಾಭ್ಯಾಸದ ನಂಬರಗಳನ್ನು ಒಂದೊಂದಾಗಿ ಕಳೆಯುತ್ತ ಬಂದೆ ಕೊನೆಗು ಹೇಗು ೭ವರ್ಷಗಳ ಸಿಂಗಲ್ ನಂಬರ್ ಡಿಗ್ರಿ ಬಿಟ್ಟು ವಿಧ್ಯಾಭ್ಯಾಸದ ಡಿಗ್ರಿ ಮುಗಿಸಿದೆ.
Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ಪ್ರತಿಕ್ರಿಯೆಗೆ ವಂದನೆಗಳು ಹರಿಪ್ರಸಾದ್, ಆ ಸಮಯದಲ್ಲಿ ಅದೆಷ್ಟೋ ಜನ ತಮ್ಮ ನಂಬರುಗಳನ್ನು ಕಳೆದುಕೊಂಡು ಬಿಟ್ಟರು. ಅದೆಷ್ಟೋ ಸಂಸಾರಗಳು ಅನಾಥವಗಿ ಬಿಟ್ಟವು. ಕೊನೆಗೂ ಸರ್ಕಾರ ಈಪ ಪಿಡುಗನ್ನು ನಿಷೇಧಿಸಿತಲ್ಲಾ, ಅದೇ ಸಮಾಧಾನ.
Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ಮಂಜುನಾಥ್ ನಮಸ್ಕಾರ! ಬಹಳ ದಿನಗಳಾದವು ಭೇಟಿಯಾಗಿ!!
ನಿಮ್ಮ ಎಲ್ಲ ಕಥೆಗಳನ್ನು ಓದಿದಾಗ, ಸ್ವಲ್ಪ ಹೆಚ್ಚು ಕಡಿಮೆ ನನ್ನ ಕಥೆಯಂತೆಯೇ ಕಾಣುತ್ತಿದೆ. ಆದರೆ ನನ್ನಪ್ಪ ಯಾವುದೇ ವ್ಯಸನ ಪೀಡಿತರಾಗಿರಲಿಲ್ಲ ಎಂಬುದೊಂದೇ ಇಲ್ಲಿನ ಭಿನ್ನತೆ ಅಷ್ಟೆ. ಉಳಿದಂತೆ ನಾನು ಕಷ್ಟಪಟ್ಟಿದ್ದೆಲ್ಲ ಸೇಮ್ ಟು ಸೇಮ್! ಇಂತಹ ಅನುಭವಗಳಾದಾಗಲೇ ಜೀವನ ಎಂದರೆ ಏನೆಂದು ಅಲ್ಪ ಸ್ಲಲ್ಪ ಗೊತ್ತಾಗುವುದು. ಏನಂತೀರಿ?
ಅಂದ ಹಾಗೆ ನಿಮ್ಮ ಲೇಖನ ಓದಿದಾಗ `ಪ್ಲೇ ವಿನ್' ಲಾಟರಿ ಪಿಡುಗೂ ನೆನಪಾಯಿತು.
Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ನಮಸ್ಕಾರ ಪ್ರಭಾಕರ್, ಸೊನ್ನೆಯಿಂದ ಮೇಲಕ್ಕೆ ಬಂದವರ ಕಥೆಗಳೆಲ್ಲಾ ಬಹುಶಃ ಒಂದೇ ರೀತಿಯಿರುತ್ತವೆ ಅನ್ಸುತ್ತೆ. ನನ್ನಪ್ಪ ಚಿನ್ನ, ಆದರೆ ಇದೊಂದು ದೊಡ್ಡ ಚಟ ಅವರಿಂದ ಏನೇನೋ ಮಾಡಿಸಿ ಬಿಟ್ಟಿತು.
Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ನಿಜಕ್ಕೂ ನಿಮ್ಮ ಆತ್ಮಕಥೆ 'ಸಿಂಗಲ್ ನಂಬರ್' ಲಾಟರಿಗಿಂತಲೂ ರೋಚಕವಾಗಿದೆ, ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ
Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ವಂದನೆಗಳು ಉಮಾಶಂಕರ್, ಮುಂದಿನ ಭಾಗ ಶುಕ್ರವಾರದಂದು ಬರುತ್ತೆ. ನೋಡಿ ಪ್ರತಿಕ್ರಿಯಿಸಿ.
Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ನಿಮ್ಮ Life story ತುಂಬನೆ Interesting ಅಗಿದೆ ಸಾರ್....... ನನ್ನ ತಂದೆಯ ಸಿಂಗಲ್ ನಂಬರ್ ಮೈಸುರು ಲಕ್ಷ್ಮೀ ನೆನಪಾಯಿತು.......
Re: ನೆನಪಿನಾಳದಿಂದ,,೨,, ಅಪ್ಪನ ಸಿಂಗಲ್ ನಂಬರ್ ಖಯಾಲಿ.
ನನ್ನಪ್ಪ ಆಗ ಮಾರುಕಟ್ಟೆಯಲ್ಲಿದ್ದ ಯಾವ ಲಾಟರಿ ಲಕ್ಷ್ಮಿಯನ್ನೂ ಬಿಡಲಿಲ್ಲ ! ದುಡ್ಡು ಹಾಕಿದ್ದೂ ಹಾಕಿದ್ದೇ, ನಾಮ ಬಿದ್ದಿದ್ದೂ ಬಿದ್ದಿದ್ದೇ !!
ನಿಮ್ಮ ಅನಿಸಿಕೆ ತಿಳಿಸಿ